ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಡಳಿತಾರೂಢ ಆಮ್ ಆದ್ಮಿ ಪಕ್ಷ ಮತ್ತೆ ಅಧಿಕಾರ ಪಡೆಯುವಲ್ಲಿ ಯಶಸ್ವಿಯಾಗಿದೆ. ಚುನಾವಣಾ ಆಯೋಗ ದೆಹಲಿಯ 70 ಕ್ಷೇತ್ರಗಳ ಚುನಾವಣಾ ಫಲಿತಾಂಶವನ್ನು ಪ್ರಕಟಿಸಿದ್ದು, ಆಡಳಿತಾರೂಢ ಆಪ್ 62 , ಬಿಜೆಪಿ 08 , ಹಾಗೂ ಕಾಂಗ್ರೆಸ್ ಶೂನ್ಯ ಕ್ಷೇತ್ರಗಳಲ್ಲಿ ಜಯ ದಾಖಲಿಸಿವೆ.
ಈ ಮೂಲಕ ಆಪ್ ಮತ್ತೆ ಅಧಿಕಾರ ಪಡೆದಿದ್ದು, ಬಿಜೆಪಿ ಪ್ರಮುಖ ಪ್ರತಿಪಕ್ಷವಾಗಿ ಹೊರ ಹೊಮ್ಮಿದೆ. ಆದರೆ ಕಾಂಗ್ರೆಸ್ ಶೂನ್ಯ ಸ್ಥಾನ ಗಳಿಸುವ ಮೂಲಕ ದೆಹಲಿಯಲ್ಲಿ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿದೆ. ಸತತ ಮೂರನೇ ಬಾರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್ ದೆಹಲಿ ಗದ್ದುಗೆ ಪಡೆದಿದ್ದು ಹೇಗೆ ಎಂಬುದರ ಕುರಿತು ಇದೀಗ ವ್ಯಾಪಕ ಚರ್ಚೆ ನಡೆಯುತ್ತಿದ್ದು, ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ಜನಪ್ರಿಯತೆಯನ್ನು ಮೀರಿ ಅರವಿಂದ್ ಕೇಜ್ರಿವಾಲ್ ಜಯಗಳಿಸಿದ್ದಕ್ಕೆ ಎಲ್ಲೆಡೆಯಿಂದ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.
ಕಾರಣ ಏನು ಎಂಬುವುದರ ವಿವರ ಇಲ್ಲಿದೆ.
ಸರಳ ಹಾಗೂ ಸ್ವಚ್ಛ ಆಡಳಿತ
ದೆಹಲಿ ಹಾಗೂ ಕೇಂದ್ರದಲ್ಲಿ ಕಾಂಗ್ರೆಸ್ ಆಡಳಿತದಲ್ಲಿದ್ದಾಗ ಭ್ರಷ್ಟಾಚಾರದ ವಿರುದ್ಧ ಆರಂಭಗೊಂಡ ಅಣ್ಣ ಹಜಾರೆ ಹೋರಾಟದಲ್ಲಿ ಹುಟ್ಟಿಕೊಂಡ ಪಕ್ಷ ಆಮ್ ಆದ್ಮಿ ಪಾರ್ಟಿ. ಆರಂಭದಲ್ಲಿಯೇ ತಮ್ಮ ವಿಭಿನ್ನ ಶೈಲಿಯ ರಾಜಕಾರಣದಲ್ಲಿ ಗಮನ ಸೆಳೆದವರು ಆಮ್ ಆದ್ಮಿಗಳು. ಸರಳ ಹಾಗೂ ಸ್ವಚ್ಛ ಆಡಳಿತದ ಭರವಸೆಯನ್ನು ನೀಡಿ ದೆಹಲಿ ಜನರ ಮನಗೆದ್ದು ಮೊದಲ ಬಾರಿಯ ಆಡಳಿತದಲ್ಲಿ ಸೈ ಅನ್ನಿಸಿಕೊಂಡರು. ಯಾರೂ ನಿರೀಕ್ಷೆ ಮಾಡದ ಮಟ್ಟಿನಲ್ಲಿ ದೆಹಲಿಯ ಗದ್ದುಗೆಯನ್ನು 2015 ರಲ್ಲಿ ಕೇಜ್ರಿವಾಲ್ ಹಿಡಿದರು. ಆದರೆ ಜನರಿಗೆ ಕೊಟ್ಟ ಭರವಸೆಯನ್ನು ಈಡೇರಿಸುವತ್ತ ಗಮನ ಹರಿಸಿದರು.
ಶಿಕ್ಷಣಕ್ಕೆ ಒತ್ತು ಕೊಟ್ಟ ಕೇಜ್ರಿವಾಲ್
ಸಹಜವಾಗಿ ರಾಜಕೀಯ ಪಕ್ಷಗಳು ಹಾಗೂ ರಾಜಕಾರಣಿಗಳು ಅಭಿವೃದ್ದಿ ಅಂದರೆ ದೊಡ್ಡ ಕಟ್ಟಡಗಳು, ರಸ್ತೆಗಳು, ಯೋಜನೆಗಳು ಎಂದು ಹೇಳಿಕೊಳ್ಳುತ್ತಾರೆ. ಆದರೆ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಜನರ ಸಾಮಾನ್ಯ ಸಮಸ್ಯೆಗಳತ್ತ ಮೊದಲ ಆದ್ಯತೆ ನೀಡಿತು. ಅದರಲ್ಲಿ ಪ್ರಮುಖವಾಗಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿತು. ಶಿಕ್ಷಣ ಕ್ಷೇತ್ರ ಖಾಸಗೀಕರಣವಾಗುತ್ತಿರುವ ಈ ಸಂದರ್ಭದಲ್ಲಿ ಸರಕಾರಿ ಶಾಲೆಗಳ ಅಭಿವೃದ್ದಿಗೆ ಆಮ್ ಆದ್ಮಿ ಸರಕಾರ ಮುಂದಾಯಿತು. ಇದರಿಂದ ದೆಹಲಿಯ ಸರಕಾರಿ ಶಾಲೆಗಳ ಅಭಿವೃದ್ದಿ, ಕಟ್ಟಡ ನಿರ್ಮಾಣ, ಶಾಲೆಗಳಿಗೆ ಶಿಕ್ಷಕರ ನೇಮಕ ಹಾಗೂ ಗುಣಮಟ್ಟದ ಶಿಕ್ಷಣದತ್ತ ಗಮನಹರಿಸಿತು. ಇದರ ಪರಿಣಾಮ ಎಂಬಂತ್ತೆ ದೆಹಲಿಯಲ್ಲಿ ಖಾಸಗಿ ಶಾಲೆಗಳಿಗಿಂತ ಸರಕಾರಿ ಶಾಲೆಗಳಿಗೆ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲು ಶರುಮಾಡಿದರು. ಕೆಲವು ಮಾದರಿ ಶಾಲೆಗಳು ಯಾವ ಖಾಸಗಿ ಶಾಲೆಗಿಂತ ಕಮ್ಮಿ ಇಲ್ಲ ಎಂಬುವುದನ್ನು ಕೇಜ್ರಿವಾಲ್ ಸರಕಾರ ಸಾಬೀತು ಪಡಿಸಿತು.
ದೆಹಲಿಗರಿಗೆ ಕೇಜ್ರಿವಾಲ್ನಿಂದ ಉಚಿತ ವಿದ್ಯುತ್
2015 ರಲ್ಲಿ ದೆಹಲಿ ಚುನಾವಣೆಯ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷ ನೀಡಿದ ಪ್ರಮುಖ ಭರವಸೆಯಾಗಿತ್ತು ಉಚಿತ ವಿದ್ಯುತ್. ದೆಹಲಿಯ ಜನರಿಗೆ ವಿದ್ಯುತ್ ಬಿಲ್ ಬಹುಮುಖ್ಯ ಸಮಸ್ಯೆಯಾಗಿತ್ತು. 200 ಯುನಿಟ್ ಮಿತಿಯೊಳಗಡೆ ವಿದ್ಯುತ್ ಬಳಸಿದ ಬಳಕೆದಾರರಿಗೆ ಯಾವುದೇ ಹಣ ಪಾವತಿ ಮಾಡಬೇಕಿಲ್ಲ ಎಂಬ ನಿರ್ಧಾರವನ್ನು ಘೋಷಣೆ ಮಾಡಿತು. 201 ರಿಂದ 400 ಯುನಿಟ್ ವರೆಗೆ ವಿದ್ಯುತ್ ಬಳಕೆ ಮಾಡಿದರೆ ಶೇ. 50 ರಷ್ಟು ಸಬ್ಸಿಡಿ ನೀಡುವ ಘೋಷಣೆಯನ್ನು ಮಾಡಿತು. ಸರಕಾರದ ಈ ನಿರ್ಧಾರ ದೆಹಲಿ ಮಾತ್ರವಲ್ಲ ದೇಶದಾದ್ಯಂತ ಭಾರೀ ಮೆಚ್ಚುಗೆಗೆ ಪಾತ್ರವಾಗಿತ್ತು.
ದೆಹಲಿ ಜನರಿಗೆ ಸ್ವಚ್ಛ ನೀರು ಪೂರೈಕೆ
ವಿದ್ಯುತ್ ದರದ ಸಮಸ್ಯೆ ಜೊತೆಗೆ ದೆಹಲಿ ಜನರನ್ನು ಕಾಡುತ್ತಿದ್ದ ಬಹುದೊಡ್ಡ ಸಮಸ್ಯೆ ಏನಂದರೆ ಕುಡಿಯಲು ಸ್ವಚ್ಛ ನೀರು ಸಿಗದೇ ಇರುವುದು. ಬಹುತೇಕ ಬಡ ಹಾಗೂ ಮಧ್ಯಮ ವರ್ಗದ ಜನರು ವಾಸಿಸುತ್ತಿರುವ ಪ್ರದೇಶಗಳಲ್ಲಿ ಕುಡಿಯುವ ನೀರು ಸ್ವಚ್ಛವಾಗಿ ಪೂರೈಕೆಯಾಗುತ್ತಿರಲಿಲ್ಲ. ಚರಂಡಿ ನೀರಿನ ಜೊತೆಗೆ ಸೇರಿಕೊಂಡ ನೀರು ಕೆಲವು ಸಂದರ್ಭದಲ್ಲಿ ಪೂರೈಕೆಯಾಗುತ್ತಿತ್ತು. ಇದರಿಂದ ದೆಹಲಿ ಜನರಲ್ಲಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳತೊಡಗಿದ್ದವು. ಇಂತಹ ಸಂದರ್ಭದಲ್ಲಿ ಜನರಿಗೆ ಕುಡಿಯಲು ಸ್ವಚ್ಛ ನೀರನ್ನು ಪೂರೈಕೆ ಮಾಡುವ ಭರವಸೆಯನ್ನು ಕೇಜ್ರಿವಾಲ್ ನೀಡಿದರು. ಅದರಂತೆ ನೀರಿನ ಸಂಪರ್ಕವನ್ನು ಸರಿಪಡಿಸಿ ಬಹುತೇಕ ಪ್ರದೇಶಗಳಲ್ಲಿ ಕಂಡು ಬಂದ ಸಮಸ್ಯೆಯನ್ನು ಬಗೆಹರಿಸಿದ್ದಾರೆ.
ಮಹಿಳೆಯರಿಗೆ ಉಚಿತ ಬಸ್ ಹಾಗೂ ಮೆಟ್ರೋ ಪ್ರಯಾಣ
ದೆಹಲಿಯಲ್ಲಿ ಮತದಾರರು ಆಮ್ ಆದ್ಮಿ ಪಕ್ಷದ ಕೈ ಹಿಡಿಯಲು ಮತ್ತೊಂದು ಕಾರಣ ಏನೆಂದರೆ ಮಹಿಳೆಯರಿಗೆ ಉಚಿತ ಬಸ್ ಹಾಗೂ ಮೆಟ್ರೋ ಪ್ರಯಾಣದ ಘೋಷಣೆ. ಜನರಿಂದ ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದೀಗ ದೆಹಲಿ ಚುನಾವಣಾ ಫಲಿತಾಂಶದಲ್ಲೂ ಪರಿಣಾಮ ಗೋಚರಿಸುತ್ತದೆ. 2020 ವಿಧಾನಸಭಾ ಚುನಾವಣೆಯಾ ಪ್ರಣಾಳಿಕೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಬಸ್ ಪ್ರಯಾಣ, ಮಹಿಳೆಯರ ಭದ್ರತೆಗಾಗಿ 'ಮೊಹಲ್ಲಾ ಮಾರ್ಷಲ್'ಗಳ ನೇಮಕ ಸೇರಿದಂತೆ ಹತ್ತು ಪ್ರಮುಖ ಭರವಸೆಯನ್ನು ನೀಡಿತ್ತು.
ವಿಐಪಿ ಸಂಸ್ಕೃತಿಗೆ ಬ್ರೇಕ್ ಹಾಕಿದ ಆಮ್ ಆದ್ಮಿಗಳು
ರಾಜಕಾರಣಿಗಳು ಅಂದರೆ ಅಲ್ಲಿ ವಿಐಪಿ ಸಂಸ್ಕೃತಿ ಸಾಮಾನ್ಯ. ಆದರೆ ದೆಹಲಿಯಲ್ಲಿ ವಿಐಪಿ ಸಂಸ್ಕೃತಿಗೆ ಬ್ರೇಕ್ ಹಾಕಿ ಹೊಸ ರಾಜಕೀಯ ಶೈಲಿಯನ್ನು ಹುಟ್ಟಿಹಾಕಿದವರು ಆಮ್ ಆದ್ಮಿಗಳು. ತಮ್ಮದೇ ಆದ ಸೈದ್ಧಾಂತಿಕ ನಡೆ ಹಾಗೂ ಭಿನ್ನ ರೀತಿಯ ರಾಜಕೀಯ ಪಟ್ಟುಗಳಿಂದ ಗುರುತಿಸಿಕೊಂಡವರು ಆಮ್ ಆದ್ಮಿಗಳು. ಸ್ವತಃ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಸರಳ ವ್ಯಕ್ತಿತ್ವ ಹಾಗೂ ಅವರ ಶಾಸಕರುಗಳ ಸರಳತೆ ಜನರಿಗೆ ಇಷ್ಟವಾಗಿದೆ. ರಾಜಕಾರಣಿಗಳ ಬಗ್ಗೆ ಕೆಟ್ಟ ಅಭಿಪ್ರಾಯ ಇರುವ ಈ ಸಂದರ್ಭದಲ್ಲಿ ಸರಳತೆಯನ್ನು ಪಾಲಿಸುವ ಮೂಲಕ ವಿಐಪಿ ಸಂಸ್ಕೃತಿಗೆ ಕಡಿವಾಣ ಹಾಕಿದವರು. ಇದು ದೆಹಲಿ ಜನರಿಗೆ ಹತ್ತಿರವಾಗಲು ಕಾರಣವಾಯಿತು.
ತಳಮಟ್ಟದಲ್ಲಿ ಪಕ್ಷ ಸಂಘಟನೆ ಆಮ್ ಆದ್ಮಿಯ ಶಕ್ತಿ
ಆಮ್ ಆದ್ಮಿ ಪಕ್ಷ ಸುಶಿಕ್ಷಿತ ಕೇಡರ್ಗಳನ್ನು ಹೊಂದಿದೆ. ಐಟಿ ಬಿಟಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದವರು ಕೆಲಸ ಬಿಟ್ಟು ಆಮ್ ಆದ್ಮಿ ಪಕ್ಷ ಸೇರಿ ಸಮಾಜ ಸೇವೆಯಲ್ಲಿ ತೊಡಗಿದರು. ದೆಹಲಿಯ ಗಲ್ಲಿ ಗಲ್ಲಿಯಲ್ಲೂ ಪಕ್ಷ ಉತ್ತಮವಾಗಿ ಸಂಘಟನೆಯಾಗಿದೆ. ಜನರ ಬಳಿಯೇ ಕಾರ್ಯಕರ್ತರು ಹಾಗೂ ಶಾಸಕರು ಇರುವುದರಿಂದ ಇದು ಚುನಾವಣಾ ಫಲಿತಾಂಶದ ಮೇಲೂ ಪರಿಣಾಮ ಬೀರಿದೆ.
ಸಾಮಾಜಿಕ ಜಾಲತಾಣಗಳ ಸದ್ಬಳಕೆ
ಆಮ್ ಆದ್ಮಿ ಪಕ್ಷ ಸಾಮಾಜಿಕ ಜಾಲತಾಣಗಳ ಬಳಕೆಯಲ್ಲೂ ಮುಂದಿದೆ. ಪಕ್ಷದಲ್ಲಿ ಐಟಿ ಬಿಟಿ ಕಂಪನಿಯಗಳಲ್ಲಿ ಕಾರ್ಯನಿರ್ವಹಿಸಿದ ಅನುಭವ ಇರುವ ಕಾರ್ಯಕರ್ತರ ಪಡೆ ಇದೆ. ಇವರ ಮೂಲಕ ಸಾಮಾಜಿಕ ಜಾಲತಾಣಗಳನ್ನು ಬಳಸಿ ದೆಹಲಿ ಜನರನ್ನು ತಲುಪುವ ಕೆಲಸವನ್ನು ಪಕ್ಷ ಮಾಡಿದೆ. ಅದರಲ್ಲಿ ಯಶಸ್ಸನ್ನು ಕಂಡಿದೆ. ಸರಕಾರದ ಯೋಜನೆಗಳು ಹಾಗೂ ಕೆಲಸ ಕಾರ್ಯಗಳನ್ನು ಜನರಿಗೆ ಸಾಮಾಜಿಕ ಜಾಲತಾಣಗಳ ಮೂಲಕ ವ್ಯವಸ್ಥಿತವಾಗಿ ತಲುಪಿಸಲಾಗಿತ್ತು.
ಅಭಿವೃದ್ಧಿಯನ್ನೇ ಚುನಾವಣಾ ಅಜೆಂಡಾ ಮಾಡಿಕೊಂಡಿದ್ದು
ದೆಹಲಿ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ತನ್ನ ಐದು ವರ್ಷಗಳ ಅಭಿವೃಧ್ಧಿ ಅಜೆಂಡಾವನ್ನೇ ಮುಂದೆ ಮಾಡಿ ಪ್ರಚಾರಕ್ಕಿಳಿಯಿತು. ಪ್ರಮುಖವಾಗಿ ಮೊಹಲ್ಲಾ ಕ್ಲಿನಿಕ್, ಸರ್ಕಾರಿ ಶಾಲೆಗಳ ಅಭಿವೃದ್ಧಿ ಹಾಗೂ ಶಿಕ್ಷಣ ಗುಣಮಟ್ಟ ಏರಿಸಿದ್ದು ಆಪ್’ಗೆ ಬಲ ನೀಡಿತು. ಇಷ್ಟೇ ಅಲ್ಲದೇ ಮಹಿಳೆಯರಿಗೆ ನಗರ ಸಾರಿಗೆಯಲ್ಲಿ ಉಚಿತ ಪ್ರಯಾಣ, ಬಿಪಿಎಲ್ ಮನೆಗಳಿಗೆ ಉಚಿತ ವಿದ್ಯುತ್, ಎಲ್ಲ ನಗರಗಳಲ್ಲಿ ಸಿಸಿಟಿವಿ ಅಳವಡಿಕೆಯಂತ ಯೋಜನೆಗಳು ಜನರ ಮೆಚ್ಚುಗೆ ಗಳಿಸಿದವು.
ದೇಶದ ಏಕೈಕ ಲಾಭದಾಯಕ ಮಂಡಿಸಿದ ಹೆಗ್ಗಳಿಕೆ
ಕೇಂದ್ರ ಸರ್ಕಾರವೂ ಸೇರಿದಂತೆ ದೇಶದ ಎಲ್ಲಾ ರಾಜ್ಯಗಳೂ ನಷ್ಟದ ಬಜೆಟ್ ಮಂಡಿಸುವುದು ಸಾಮಾನ್ಯ ಸಂಗತಿ. ಆದರೆ ದೆಹಲಿ ಮಾತ್ರ ಲಾಭದ ಬಜೆಟ್ ಮಂಡಿಸಿ ಇಡೀ ದೇಶದ ಗಮನ ಸೆಳೆಯಿತು. ಒಟ್ಟು 7 ಸಾವಿರ ಕೋಟಿ ರೂ. ಲಾಭದ ಬಜೆಟ್ ಮಂಡಿಸಿದ ಹೆಗ್ಗಳಿಕೆ ಕೇಜ್ರಿವಾಲ್ ನೇತೃತ್ವದ ಆಪ್’ಗೆ ಸಲ್ಲುತ್ತದೆ. ಈ ಕುರಿತು ಸಿಎಜಿ ವರದಿ ಕೂಡ ಉಲ್ಲೇಖಿಸಿದ್ದು ಗಮನಾರ್ಹ.
ಸೌಮ್ಯ ರಾಜಕಾರಣಕ್ಕೆ ಮುನ್ನಡಿ ಬರೆದ ಕೇಜ್ರಿವಾಲ್
ಬಿಜೆಪಿ ನಾಯಕರು ತಮ್ಮನ್ನು ಭಯೋತ್ಪಾದಕ ಎಂದರೂ ಕೆರಳದ ಅರವಿಂದ್ ಕೇಜ್ರಿವಾಲ್, ನಾನು ಭಯೋತ್ಪಾದಕ ಎಂದೆನಿಸಿದರೆ ದೆಹಲಿ ಜನತೆ ಬಿಜೆಪಿಗೆ ಮತ ನೀಡಿ ಎಂದು ಹೇಳುವ ಮೂಲಕ ಸಂಯಮ ಪ್ರದರ್ಶಿಸಿದ್ದು ಪ್ರಸ್ತುತ ರಾಜಕಾರಣದಲ್ಲಿ ವಿರಳ ಉದಾಹರಣೆಯಾಗಿದೆ. ವಿರೋಧಿಗಳನ್ನು ಅದರಲ್ಲೂ ಪ್ರಧಾನಿ ಮೋದಿ ಕುರಿತು ಸೌಮ್ಯವಾಗಿಯೇ ಎದುರು ಹಾಕಿಕೊಂಡ ಕೇಜ್ರಿವಾಲ್, ಅಪ್ಪಿತಪ್ಪಿಯೂ ವಿರೋಧಿ ನಾಯಕರನ್ನು ಅವಹೇಳನಕಾರಿಯಾಗಿ ತರಾಟೆಗೆ ತೆಗೆದುಕೊಳ್ಳಲಿಲ್ಲ. ದೆಹಲಿಯಲ್ಲಿ ಪ್ರಧಾನಿ ಮೋದಿ ಅವರನ್ನು ಸೋಲಿಸಿ ಎಂಬ ಪಾಕ್ ಸಚಿವ ಫವಾದ್ ಚೌಧರಿ ಟ್ವೀಟ್’ನ್ನು ಖಂಡಿಸಿದ್ದ ಕೇಜ್ರಿವಾಲ್, ದೆಹಲಿ ಚುನಾವಣೆ ಭಾರತದ ಆಂತರಿಕ ರಾಜಕಾರಣವಾಗಿದ್ದು ಪ್ರಧಾನಿ ಮೋದಿ ನನ್ನ ಪ್ರಧಾನಿ ಕೂಡ ಎಂದು ಹೇಳುವ ಮೂಲಕ ಪ್ರಬುದ್ಧತೆ ಮೆರೆದರು.
ಮತದಾರನನ್ನು ತಲುಪುವಲ್ಲಿ ಯಶಸ್ವಿ
ತನ್ನ ಐದು ವರ್ಷಗಳ ಕಾರ್ಯವೈಖರಿಯನ್ನೇ ನೆಚ್ಚಿಕೊಂಡು ಚುನಾವಣಾ ಅಖಾಡಕ್ಕಿಳಿದಿದ್ದ ಆಪ್, ಮತದಾರರ ಮನ ಮುಟ್ಟುವಲ್ಲಿ ಯಶಸ್ವಿಯಾಯಿತು. ಯಾವುದೇ ಪ್ರಚೋದನಕಾರಿ ಹೇಳಿಕೆಗಳಿಗೆ ಮೊರೆ ಹೋಗದೇ ಕೇವಲ ಮಾಡಿದ ಅಭಿವೃದ್ಧಿ ಕಾರ್ಯಗಳ ಕುರಿತು ಮಾತ್ರ ಆಪ್ ಪ್ರಚಾರ ಸಭೆಗಳಲ್ಲಿ ಮಾತನಾಡಿತು.
ಯುವ ಸಮುದಾಯಕ್ಕೆ ಆಶಾಕಿರಣವಾಗಿ ಕಂಡ ಕೇಜ್ರಿವಾಲ್
ನಿರದ್ಯೋಗದಿಂದ ತತ್ತರಿಸಿದ ಯುವ ಜನತೆಗೆ ಅರವಿಂದ್ ಕೇಜ್ರಿವಾಲ್ ಆಶಾಕಿರಣವಾಗಿ ಕಂಡಿದ್ದರಲ್ಲಿ ಆಶ್ವರ್ಯವಿಲ್ಲ. ಲಾಭದಾಯಕ ಬಜೆಟ್ ಮಂಡಿಸಿದ್ದ ಕೇಜ್ರಿವಾಲ್ ಉದ್ಯೋಗ ಸೃಷ್ಟಿಸುವಲ್ಲಿ ಯಶಸ್ವಿಯಾಗುತ್ತಾರೆ ಎಂದು ನಂಬಿದ ಯುವ ಮತದಾರರು ಆಪ್’ಗೆ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿರುವುದು ಮೇಲ್ನೋಟಕ್ಕೆ ಕಂಡುಬರುವ ಸತ್ಯವಾಗಿದೆ.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ